ವೀರ್-ಜ಼ಾರಾ ೨೦೦೪ರ ಒಂದು ಹಿಂದಿ ನಿರ್ದಿಷ್ಟ ಇತಿಹಾಸ ಕಾಲದ ನಾಟಕೀಯ ಚಲನಚಿತ್ರವಾಗಿದೆ. ಇದನ್ನು ಯಶ್ ಚೋಪ್ರಾ ನಿರ್ದೇಶಿಸಿದ್ದಾರೆ ಮತ್ತು ಯಶ್ ಹಾಗೂ ಅವರ ಮಗ ಆದಿತ್ಯ ಚೋಪ್ರಾ ನಿರ್ಮಾಣ ಮಾಡಿದ್ದಾರೆ. ಶಾರುಖ್ ಖಾನ್ ಮತ್ತು ಪ್ರೀತಿ ಜಿಂಟಾ ನಾಮಸೂಚಕ ಹತಭಾಗ್ಯ ಪ್ರೇಮಿಗಳಾಗಿ ನಟಿಸಿದ್ದಾರೆ; ವೀರ್ ಒಬ್ಬ ಭಾರತೀಯ ವಾಯುಸೇನೆಯ ಪೈಲಟ್ ಆಗಿರುತ್ತಾನೆ ಮತ್ತು ಜ಼ಾರಾ ಒಬ್ಬ ಪಾಕಿಸ್ತಾನಿ ರಾಜಕಾರಣಿಯ ಮಗಳಾಗಿರುತ್ತಾಳೆ. ಸುಳ್ಳು ಆರೋಪಗಳ ಮೇಲೆ ವೀರ್‌ನನ್ನು ಜೈಲಿಗೆ ಹಾಕಲಾಗುತ್ತದೆ. ಒಬ್ಬ ಯುವ ಪಾಕಿಸ್ತಾನಿ ವಕೀಲೆ (ರಾಣಿ ಮುಖರ್ಜಿ) ಅವನ ಮೊಕದ್ದಮೆಯನ್ನು ನಡೆಸಿಕೊಡುತ್ತಾಳೆ. ಅಮಿತಾಭ್ ಬಚ್ಚನ್, ಹೇಮ ಮಾಲಿನಿ, ದಿವ್ಯಾ ದತ್ತಾ, ಮನೋಜ್ ಬಾಜ್‍ಪೇಯಿ, ಬಮನ್ ಇರಾನಿ, ಅನುಪಮ್ ಖೇರ್ ಮತ್ತು ಕಿರಣ್ ಖೇರ್ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ಏಳು ವರ್ಷಗಳ ನಂತರ ಚೋಪ್ರಾ ಚಿತ್ರಗಳಿಗೆ ವಾಪಸಾದರು; ಈ ಅವಧಿಯಲ್ಲಿ ಅವರು ತಮಗೆ ಬಂದ ಚಿತ್ರಕಥೆಗಳಿಂದ ಅಸಂತುಷ್ಟರಾಗಿದ್ದರು. ಆದಿತ್ಯ ತಾವು ಬರೆದ ಒಂದು ಕಥೆಯ ಕೆಲವು ದೃಶ್ಯಗಳನ್ನು ನಿರೂಪಿಸಿದಾಗ ಚೋಪ್ರಾ ಆಸಕ್ತರಾಗಿ ಅದನ್ನು ನಿರ್ದೇಶಿಸಿದರು. ಈ ಚಿತ್ರವು ಪಂಜಾಬ್‍ಗೆ ಗೌರವ ಕಾಣಿಕೆಯಾಗಬೇಕೆಂದು ಚೋಪ್ರಾ ಉದ್ದೇಶಿಸಿದ್ದರು. ಭಾರತ ಮತ್ತು ಪಾಕಿಸ್ತಾನಗಳಲ್ಲಿ ಹಿನ್ನೆಲೆಯನ್ನು ಹೊಂದಿದ್ದ ಈ ಚಿತ್ರದ ಪ್ರಧಾನ ಛಾಯಾಗ್ರಹಣವು ಪಂಜಾಬ್ ಮತ್ತು ಮುಂಬಯಿಯ ವಿವಿಧ ಸ್ಥಳಗಳಲ್ಲಿ ನಡೆಯಿತು; ಚಿತ್ರದ ಕೆಲವು ಭಾಗಗಳನ್ನು ಪಾಕಿಸ್ತಾನದಲ್ಲೂ ಚಿತ್ರೀಕರಿಸಲಾಯಿತು. ಧ್ವನಿವಾಹಿನಿ ಸಂಗ್ರಹವು ಮದನ್ ಮೋಹನ್‍ರ ಹಳೆಯ ರಚನೆಗಳ ಮೇಲೆ ಆಧಾರಿತವಾಗಿತ್ತು. ಹಾಡುಗಳಿಗೆ ಸಾಹಿತ್ಯವನ್ನು ಜಾವೇದ್ ಅಕ್ತರ್ ಬರೆದಿದ್ದರು. ಈ ಧ್ವನಿವಾಹಿನಿಯು ಭಾರತದಲ್ಲಿ ಆ ವರ್ಷ ಅತಿ ಹೆಚ್ಚು ಮಾರಾಟಗೊಂಡಿತು. ಚಿತ್ರವು ೧೨ ನವೆಂಬರ್ ೨೦೦೪ರಂದು ದೀಪಾವಳಿ ಹಬ್ಬದ ವೇಳೆ ಬಿಡುಗಡೆಗೊಂಡಿತು. ವೀರ್-ಜ಼ಾರಾ ವಿಶ್ವಾದ್ಯಂತ ₹976.4 ದಶಲಕ್ಷಕ್ಕಿಂತ ಹೆಚ್ಚು ಗಳಿಸಿ ಭಾರತ ಮತ್ತು ವಿದೇಶ ಎರಡೂ ಕಡೆ ವರ್ಷದ ಅತಿ ಹೆಚ್ಚು ಹಣಗಳಿಸಿದ ಭಾರತೀಯ ಚಲನಚಿತ್ರವೆನಿಸಿಕೊಂಡಿತು. ಈ ಚಿತ್ರವು ವಿಮರ್ಶಕರಿಂದ ಬಹಳ ಸಕಾರಾತ್ಮಕ ವಿಮರ್ಶೆಗಳನ್ನು ಪಡೆಯಿತು. ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆಗಳು, ಸಂಗೀತ, ಅಭಿನಯಗಳು ಮತ್ತು ಭಾರತ-ಪಾಕಿಸ್ತಾನ ಸಂಬಂಧಗಳ ಸೂಕ್ಷ್ಮ ಚಿತ್ರಣವನ್ನು ಪ್ರಶಂಸಿಸಲಾಯಿತು. ಈ ಚಿತ್ರವು ಹಂಚಿಕೊಂಡ ಪಂಜಾಬಿ ಸಂಸ್ಕೃತಿ, ಜಾತ್ಯತೀತತೆ, ಸ್ತ್ರೀ ಸಮಾನತಾವಾದ, ಇತ್ಯಾದಿಗಳಿಗೆ ಸಂಬಂಧಿಸಿದ ವಿಷಯಗಳನ್ನು ಹೊಂದಿದೆ ಎಂದು ವಿಮರ್ಶಕರು ವರ್ಣಿಸಿದರು. ಈ ಚಿತ್ರವು ಅತ್ಯುತ್ತಮ ಚಲನಚಿತ್ರ, ಅತ್ಯುತ್ತಮ ಕಥೆ ಸೇರಿದಂತೆ ನಾಲ್ಕು ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಗೆದ್ದಿತು. ೬ನೇ ಐಫ಼ಾ ಪ್ರಶಸ್ತಿ ಸಮಾರಂಭದಲ್ಲಿ, ಈ ಚಿತ್ರವು ಅತ್ಯುತ್ತಮ ಚಲನಚಿತ್ರ, ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ಸಂಗೀತ ನಿರ್ದೇಶಕ, ಅತ್ಯುತ್ತಮ ನಟ ಮತ್ತು ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಸೇರಿದಂತೆ ಏಳು ಪ್ರಶಸ್ತಿಗಳನ್ನು ಗೆದ್ದಿತು. ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ಹಿತಕರ ಮನೊರಂಜನೆ ಒದಗಿಸುವ ಅತ್ಯುತ್ತಮ ಜನಪ್ರಿಯ ಚಲನಚಿತ್ರ ಪ್ರಶಸ್ತಿಯನ್ನು ಕೂಡ ಗೆದ್ದಿತು. == ಕಥಾವಸ್ತು == ೨೦೦೪ರಲ್ಲಿ, ಪಾಕಿಸ್ತಾನದ ಸರ್ಕಾರವು ಸದ್ಭಾವದ ಸೂಚನೆಯಾಗಿ ಭಾರತೀಯ ಖೈದಿಗಳಿಗೆ ಸಂಬಂಧಿಸಿದ ಬಗೆಹರಿಸದ ಮೊಕದ್ದಮೆಗಳನ್ನು ಪರಿಶೀಲಿಸಲು ನಿರ್ಧರಿಸುತ್ತದೆ. ಅವಳ ಮೊದಲ ಮೊಕದ್ದಮೆಯಾಗಿ, ಒಬ್ಬ ಉದಯೋನ್ಮುಖ ಪಾಕಿಸ್ತಾನಿ ವಕೀಲೆ ಸಾಮಿಯಾ ಸಿದ್ದೀಕಿಗೆ (ರಾನಿ ಮುಖರ್ಜಿ) ೭೮೬ನೇ ಖೈದಿಯ ಪ್ರತಿವಾದ ಸಮರ್ಥನೆಯನ್ನು ನೀಡಲಾಗುತ್ತದೆ. ೨೨ ವರ್ಷಗಳಲ್ಲಿ ಆ ಖೈದಿಯು ಯಾರೊಡನೆಯೂ ಮಾತನಾಡಿರುವುದಿಲ್ಲ. ಅವನನ್ನು ಅವನ ಹೆಸರಾದ ವೀರ್ ಪ್ರತಾಪ್ ಸಿಂಗ್ (ಶಾರುಖ್ ಖಾನ್) ಎಂದು ಸಂಬೋಧಿಸಿದ ಮೇಲೆ, ವೀರ್ ಸಾಮಿಯಾ ಮುಂದೆ ತನ್ನ ಮನಸ್ಸು ಬಿಚ್ಚಿ ತನ್ನ ಕಥೆಯನ್ನು ಹೇಳುತ್ತಾನೆ. ಜ಼ಾರಾ ಹಾಯತ್ ಖಾನ್ (ಪ್ರೀತಿ ಜ಼ಿಂಟಾ) ಒಬ್ಬ ಉತ್ಸಾಹಭರಿತ ಪಾಕಿಸ್ತಾನಿ ಮಹಿಳೆಯಾಗಿರುತ್ತಾಳೆ. ಅವಳ ಕುಟುಂಬ ರಾಜಕೀಯ ಹಿನ್ನೆಲೆಯದಾಗಿರುತ್ತದೆ ಮತ್ತು ಲಾಹೋರ್‌ನಲ್ಲಿ ಉನ್ನತ ಸ್ಥಾನವನ್ನು ಹೊಂದಿರುತ್ತದೆ. ಜ಼ಾರಾಳ ಸಿಖ್ ಮನೆಶಿಕ್ಷಕಿ (ಇವಳನ್ನು ಜ಼ಾರಾ ಅಜ್ಜಿ ಎಂದು ಸಂಬೋಧಿಸುತ್ತಿರುತ್ತಾಳೆ) ಬೇಬೆ (ಝೊಹ್ರಾ ಸೆಹೆಗಲ್) ತನ್ನ ಕೊನೆ ಆಸೆಯಾಗಿ ತನ್ನ ಬೂದಿಯನ್ನು ತನ್ನ ಪೂರ್ವಜರದ್ದು ಇದ್ದಲ್ಲಿ ಸತ್ಲೆಜ್ ನದಿಯಲ್ಲಿ ಹರಡಬೇಕೆಂದು ಜ಼ಾರಾಳನ್ನು ಕೇಳಿಕೊಳ್ಳುತ್ತಾಳೆ. ಭಾರತಕ್ಕೆ ಪ್ರಯಾಣಿಸುವಾಗ, ಜ಼ಾರಾಳ ಬಸ್ ಅಪಘಾತಕ್ಕೀಡಾಗುತ್ತದೆ. ಭಾರತೀಯ ವಾಯುಸೇನೆಯ ಒಬ್ಬ ಪೈಲಟ್ ಆಗಿರುವ ವೀರ್ ಅವಳನ್ನು ಕಾಪಾಡುತ್ತಾನೆ ಮತ್ತು ಅವಳು ಬೇಬೆಯ ಅಂತಿಮ ಸಂಸ್ಕಾರಗಳನ್ನು ನೆರವೇರಿಸುತ್ತಾಳೆ. ಲೋಹ್ರಿ ಸಂದರ್ಭದಲ್ಲಿ ಒಂದು ದಿನ ಒಟ್ಟಾಗಿ ಕಳೆಯಲು ಜ಼ಾರಾ ತನ್ನೊಡನೆ ತನ್ನ ಹಳ್ಳಿಗೆ ಬರುವಂತೆ ವೀರ್ ಜ಼ಾರಾಳ ಮನವೊಲಿಸುತ್ತಾನೆ. ಜ಼ಾರಾ ವೀರ್‌ನ ಚಿಕ್ಕಪ್ಪ ಚೌಧರಿ ಸುಮೇರ್ (ಅಮಿತಾಭ್ ಬಚ್ಚನ್) ಮತ್ತು ಅವನ ಚಿಕ್ಕಮ್ಮ ಸರಸ್ವತಿಯರನ್ನು (ಹೇಮಾ ಮಾಲಿನಿ) ಭೇಟಿಯಾಗುತ್ತಾಳೆ. ತಾನು ಜ಼ಾರಾಳನ್ನು ಪ್ರೀತಿಸಲು ಆರಂಭಿಸಿದ್ದೇನೆ ಎಂದು ವೀರ್‌ಗೆ ಅರಿವಾಗುತ್ತದೆ. ಮರುದಿನ, ವೀರ್ ತನ್ನ ಪ್ರೀತಿಯನ್ನು ಹೇಳಲು ಯೋಜಿಸಿ ಜ಼ಾರಾಳನ್ನು ಲಾಹೋರ್‌ಗಿನ ಅವಳ ಟ್ರೇನ್‍ಗೆ ಬಿಡಲು ರೈಲು ನಿಲ್ದಾಣಕ್ಕೆ ಕರೆದೊಯ್ಯುತ್ತಾನೆ. ಆದರೆ, ಅಲ್ಲಿ ಅವನು ಜ಼ಾರಾಳ ನಿಶ್ಚಿತ ವರ ರಜ಼ಾ ಶರಾಜ಼ಿಯನ್ನು (ಮನೋಜ್ ಬಾಜಪೇಯಿ) ಭೇಟಿಯಾಗುತ್ತಾನೆ. ಅವಳು ಹೊರಡುವ ಮುನ್ನ, ತಾನು ಅವಳನ್ನು ಪ್ರೀತಿಸುತ್ತಿರುವುದಾಗಿ ಹೇಳಿ, ತಾವಿಬ್ಬರೂ ಜೊತೆಯಾಗಿರಲಾಗುವುದಿಲ್ಲ ಎಂದು ಒಪ್ಪಿಕೊಳ್ಳುತ್ತಾನೆ. ಜ಼ಾರಾ ಮೌನವಾಗಿ ಟ್ರೇನ್ ಏರಿ ಅವನಿಗೆ ವಿದಾಯ ಹೇಳುತ್ತಾಳೆ; ಅವರು ಎಂದೂ ಮತ್ತೆ ಭೇಟಿಯಾಗುವುದಿಲ್ಲ ಎಂದು ಇಬ್ಬರೂ ನಂಬುತ್ತಾರೆ. ಪಾಕಿಸ್ತಾನದಲ್ಲಿ ಮನೆಗೆ ಮರಳಿ, ತಾನೂ ವೀರ್‌ನನ್ನು ಪ್ರೀತಿಸುತ್ತಿರುವುದಾಗಿ ಆದರೆ ತನ್ನ ಕುಟುಂಬದ ಗೌರವವನ್ನು ಕಾಪಾಡಿ ರಜ಼ಾನನ್ನು ಮದುವೆಯಾಗಬೇಕೆಂದು ಜ಼ಾರಾಗೆ ಅರಿವಾಗುತ್ತದೆ. ಈ ವಿವಾಹವು ಅವಳ ತಂದೆ ಜಹಾಂಗೀರ್‌ನ (ಬಮನ್ ಇರಾನಿ) ರಾಜಕೀಯ ವೃತ್ತಿಜೀವನಕ್ಕೆ ನೆರವಾಗುವುದಿರುತ್ತದೆ. ಜ಼ಾರಾ ಅಳುತ್ತಿರುವುದನ್ನು ನೋಡಿ, ಅವಳ ಸೇವಕಿ ಮತ್ತು ಗೆಳತಿ ಶಬ್ಬೊ (ದಿವ್ಯಾ ದತ್ತಾ) ವೀರ್‌ಗೆ ಕರೆಮಾಡಿ ಅವಳ ಮದುವೆಯಾಗುವ ಮೊದಲು ಜ಼ಾರಾಳನ್ನು ಅಲ್ಲಿಂದ ಕರೆದೊಯ್ಯುವಂತೆ ಕೇಳಿಕೊಳ್ಳುತ್ತಾಳೆ. ವೀರ್ ಭಾರತೀಯ ವಾಯುಸೇನೆಯ ಕೆಲಸವನ್ನು ಬಿಟ್ಟು ಪಾಕಿಸ್ತಾನಕ್ಕೆ ಪ್ರಯಾಣಿಸುತ್ತಾನೆ. ಅವನು ಆಗಮಿಸಿದಾಗ, ಜ಼ಾರಾ ಅಳುತ್ತಾ ಓಡಿ ತೋಳು ಬಾಚಿ ತಬ್ಬಿಕೊಳ್ಳುತ್ತಾಳೆ. ಇದನ್ನು ನೋಡಿ ಅವಳ ತಂದೆಗೆ ಆಘಾತವಾಗಿ ಕಾಯಿಲೆ ಬೀಳುತ್ತಾನೆ. ವೀರ್ ಜ಼ಾರಾಳನ್ನು ಬಿಟ್ಟುಬಿಡುವಂತೆ ಮರಿಯಮ್ ವೀರ್‌ನನ್ನು ಬೇಡಿಕೊಳ್ಳುತ್ತಾಳೆ ಏಕೆಂದರೆ ಜ಼ಾರಾ ಒಬ್ಬ ಭಾರತೀಯನನ್ನು ಪ್ರೀತಿಸುತ್ತಿದ್ದಾಳೆಂಬ ಸುದ್ದಿ ಹೊರಬಿದ್ದರೆ ಜಹಾಂಗೀರ್‌ನ ಗಮನಸೆಳೆಯುವ ಉನ್ನತ ಪ್ರಖ್ಯಾತಿ ಮತ್ತು ಆರೋಗ್ಯ ನಾಶವಾಗುತ್ತದೆ. ವೀರ್ ಈ ವಿನಂತಿಯನ್ನು ಗೌರವಿಸಿ ಹೊರಡಲು ನಿರ್ಧರಿಸುತ್ತಾನೆ. ಆದರೆ ಜ಼ಾರಾ ತನಗೆ ತಂದ ಅವಮಾನದಿಂದ ಆಕ್ರೋಶಗೊಂಡು ವೀರ್‌ನನ್ನು ಭಾರತೀಯ ಗೂಢಚಾರನೆಂದು ಸುಳ್ಳು ಆಪಾದನೆ ಹೊರಿಸಿ ಜೈಲಿಗೆ ಹಾಕಿಸುತ್ತಾನೆ. ಈ ನಡುವೆ, ವೀರ್ ಭಾರತಕ್ಕೆ ಮರಳಬೇಕೆಂದಿದ್ದ ಬಸ್ ಪ್ರಪಾತದಿಂದ ಕೆಳಗೆ ಬಿದ್ದು ಎಲ್ಲ ಪ್ರಯಾಣಿಕರು ಮೃತರಾಗುತ್ತಾರೆ. ಇದನ್ನು ಜೈಲಿನಲ್ಲಿ ವೀರ್ ಕೇಳಿದಾಗ, ಜ಼ಾರಾಳ ತಾಯಿ ಕೊಟ್ಟ ತಾಯಿತವೇ ತನ್ನ ಜೀವವನ್ನು ಕಾಪಡಿತು ಎಂದು ನಂಬುತ್ತಾನೆ. ಜ಼ಾರಾ ಈಗ ಮದುವೆಯಾಗಿ ಸುಖವಾಗಿದ್ದಿರುತ್ತಾಳೆ ಮತ್ತು ತಾನು ಕೇವಲ ಅವಳ ಜೀವನವನ್ನು ಹಾಳುಮಾಡುತ್ತೇನೆಂದು ನಂಬಿ ಮೊಕದ್ದಮೆಯಲ್ಲಿ ವಾದ ಮಾಡುವಾಗ ಜ಼ಾರಾ ಅಥವಾ ಅವಳ ಕುಟುಂಬವನ್ನು ಪ್ರಸ್ತಾಪಿಸಬಾರದು ಎಂದು ವೀರ್ ಸಾಮಿಯಾಗೆ ವಿನಂತಿ ಮಾಡಿಕೊಳ್ಳುತ್ತಾನೆ. ಈ ಕಾರಣದಿಂದ, ಸಾಮಿಯಾ ಗಡಿರೇಖೆಯನ್ನು ದಾಟಿ ಅವನ ನಿಜವಾದ ಗುರುತನ್ನು ಸಾಬೀತುಪಡಿಸಬಲ್ಲ ಅವನ ಹಳ್ಳಿಯಲ್ಲಿನ ಯಾರನ್ನಾದರೂ ಪತ್ತೆಹಚ್ಚಲು ನಿರ್ಧರಿಸುತ್ತಾಳೆ. ಬದಲಾಗಿ ವೀರ್‌ನ ಹಳ್ಳಿಯಲ್ಲಿ ಅವಳು ಜ಼ಾರಾ ಮತ್ತು ಶಬ್ಬೊಳನ್ನು ಭೇಟಿಯಾಗಿ ಆಘಾತಗೊಳ್ಳುತ್ತಾಳೆ. ವೀರ್ ೨೨ ವರ್ಷಗಳ ಹಿಂದೆ ಬಸ್ ಅಪಘಾತದಲ್ಲಿ ಮೃತನಾದನು ಎಂದು ಜ಼ಾರಾ ಭಾವಿಸಿರುತ್ತಾಳೆ. ಅವನ ಮರಣದ ಸುದ್ದಿಯ ನಂತರ, ಅವಳು ರಜ಼ಾನೊಂದಿಗೆ ತನ್ನ ಮದುವೆಯನ್ನು ಮುರಿದುಕೊಂಡಿರುತ್ತಾಳೆ, ಮತ್ತು ಅವಳ ತಂದೆಯು ಅದಕ್ಕೆ ಒಪ್ಪಿ ಅವರಿಬ್ಬರ ವಿಚ್ಛೇದನವನ್ನು ತಾನೇ ಮಾಡಿಸಿರುತ್ತಾನೆ. ನಂತರ, ಜ಼ಾರಾ ಮತ್ತು ಶಬ್ಬೊ ಪಾಕಿಸ್ತಾನವನ್ನು ಬಿಟ್ಟು, ಹುಡುಗಿಯರ ಶಾಲೆಯನ್ನು ನಡೆಸುವ ವೀರ್‌ನ ಕನಸನ್ನು ಜೀವಂತವಾಗಿಡಲು ವೀರ್‌ನ ಹಳ್ಳಿಯಲ್ಲಿ ನೆಲೆಸಿರುತ್ತಾರೆ. ಸಾಮಿಯಾ ಜ಼ಾರಳನ್ನು ಪಾಕಿಸ್ತಾನ ವಾಪಸು ಕರೆದೊಯ್ಯುತ್ತಾಳೆ. ಅವಳು ವೀರ್‌ನೊಂದಿಗೆ ಭಾವನಾತ್ಮಕ ಮರುಸೇರಿಕೆಯನ್ನು ಹಂಚಿಕೊಳ್ಳುತ್ತಾಳೆ. ಅವಳ ಹೇಳಿಕೆ ಮತ್ತು ಸಾಕ್ಷ್ಯಾಧಾರ ವೀರ್‌ನ ಮುಗ್ಧತೆಯನ್ನು ಸಾಬೀತುಪಡಿಸುತ್ತದೆ ಮತ್ತು ನ್ಯಾಯಾಧೀಶನು ಪಾಕಿಸ್ತಾನದ ಪರವಾಗಿ ಅವನ ಕ್ಷಮೆಕೇಳಿ ಅವನನ್ನು ಮುಕ್ತಗೊಳಿಸುತ್ತಾನೆ. ಅಂತಿಮವಾಗಿ ಮತ್ತೆ ಸೇರಿದ ವೀರ್ ಮತ್ತು ಜ಼ಾರಾ ಮದುವೆಯಾಗಿ ವಾಘಾ ಬಾರ್ಡರ್, ಅಮೃತಸರ್‍ದಲ್ಲಿ ಸಾಮಿಯಾಗೆ ವಿದಾಯ ಹೇಳಿ ತಮ್ಮ ಹಳ್ಳಿಗೆ ಮರಳಿ ಸಂತೋಷದಿಂದ ಬಾಳುತ್ತಾರೆ. == ಪಾತ್ರವರ್ಗ == == ತಯಾರಿಕೆ == === ಬೆಳವಣಿಗೆ === ದಿಲ್ ತೋ ಪಾಗಲ್ ಹೇ ಚಿತ್ರದ ನಂತರ ಯಶ್ ಚೋಪ್ರಾ ನಿರ್ದೇಶನಕ್ಕೆ ಮರಳಲು ಹವಣಿಸುತ್ತಿದ್ದರು. ನಿರ್ದೇಶಕರಾಗಿ ಚೋಪ್ರಾ ಮರಳಲು ಅವರು ಮತ್ತು ಅವರ ಮಗ ಆದಿತ್ಯ ಹೊಸ ಕಥೆಯನ್ನು ಹುಡುಕಲು ಆರಂಭಿಸಿದರು. ಯಾವುದೇ ಹೊಸ ಕಥೆಗಳು ಚೋಪ್ರಾರನ್ನು ಉತ್ಸಾಹಗೊಳಿಸಲಿಲ್ಲ. ನಂತರ ಅವರು ಮತ್ತೊಂದು ಕಥೆಯನ್ನು ಅಂತಿಮಗೊಳಿಸಿ ಪಾತ್ರ ನಿರ್ಧಾರಣವನ್ನು ಆರಂಭಿಸಿದರು. ನಂತರ ಆದಿತ್ಯ ಒಂದು ಹೊಸ ಕಥೆಯ ಕೆಲವು ದೃಶ್ಯಗಳ ನಿರೂಪಣೆ ಮಾಡಿದರು. ಆದರೆ ತಾವು ನಿರ್ದೇಶಿಸಲಾಗುವುದಿಲ್ಲ ಎಂದು ಹೇಳಿದರು. ಚೋಪ್ರಾ ಆಸಕ್ತರಾಗಿ ಹೊಸ ಯೋಜನೆಯ ಮೇಲೆ ಕೆಲಸಮಾಡಲು ಆರಂಭಿಸಿದರು. ಸಿದ್ಧತೆ ಮಾಡಿಕೊಳ್ಳಲು, ಚೋಪ್ರಾ ಪಾಕಿಸ್ತಾನಿ ಮದುವೆಗಳ ವೀಡಿಯೊಗಳನ್ನು ವೀಕ್ಷಿಸಿದರು ಮತ್ತು ಚಿತ್ರದಲ್ಲಿ ಪಾಕಿಸ್ತಾನಿ ಸಂಸ್ಕೃತಿ, ಅಲ್ಲಿಯ ನ್ಯಾಯಾಲಯಗಳು ಮತ್ತು ಪ್ರಾಂತ ಭಾಷೆಗಳ ಚಿತ್ರಣಕ್ಕಾಗಿ ಪ್ರಾಧ್ಯಾಪಕಿ ನಸ್ರೀನ್ ರೆಹಮಾನ್‍ರ ಸಲಹೆ ಪಡೆದರು. === ಪಾತ್ರವರ್ಗ ಮತ್ತು ಚಿತ್ರತಂಡ === ಶಾರುಖ್ ಖಾನ್ ಮುಖ್ಯ ಪಾತ್ರವನ್ನು ಮಾಡಿದರು. ಚಿತ್ರದಲ್ಲಿ ಖಾನ್ ಸಂಕ್ಷಿಪ್ತವಾಗಿ ೬೦ ವರ್ಷ ವಯಸ್ಸಿನ ವ್ಯಕ್ತಿಯ ಪಾತ್ರವಹಿಸಿದರು ಮತ್ತು ಅವರಿಗೆ ಇದು ಕಷ್ಟದ ಪಾತ್ರವೆಂದೆನಿಸಿತು. ಸಾಮಿಯಾ ಸಿದ್ದೀಕಿಯ ಪಾತ್ರವು ಪಾಕಿಸ್ತಾನಿ ಮಾನವ ಹಕ್ಕುಗಳ ಕಾರ್ಯಕರ್ತೆ ಆಸ್ಮಾ ಜಹಾಂಗೀರ್ ಮೇಲೆ ಆಧಾರಿತವಾಗಿತ್ತು. ಆರಂಭದಲ್ಲಿ ಈ ಪಾತ್ರವನ್ನು ಬೇರೆ ನಟಿಯರ ಮುಂದೆ ಇಡಲಾಗಿತ್ತು. ಆದರೆ ಅವರು ನಿರಾಕರಿಸಿದ ಮೇಲೆ ಅದು ರಾನಿ ಮುಖರ್ಜಿಗೆ ಹೋಯಿತು. ಜ಼ಾರಾಳ ಪಾತ್ರವನ್ನು ಮೊದಲು ಕಾಜೋಲ್‍ರ ಮುಂದಿಡಲಾಗಿತ್ತು. ಅವರು ನಿರಾಕರಿಸಿದ ಮೇಲೆ ಅದು ಜ಼ಿಂಟಾರಿಗೆ ಹೋಯಿತು. ಉರ್ದೂ ಮಾತನಾಡಲು ತಮ್ಮ ವಾಕ್‍ಶೈಲಿಯನ್ನು ಸುಧಾರಿಸಿಕೊಳ್ಳಲು ಜ಼ಿಂಟಾ ವಿವಿಧ ಪಾಠಗಳಲ್ಲಿ ಭಾಗವಹಿಸಬೇಕಾಯಿತು. ಚಿತ್ರದ ವಸ್ತ್ರಗಳನ್ನು ಮನೀಶ್ ಮಲ್ಹೋತ್ರಾ ನಿಭಾಯಿಸಿದರು. ಖಾನ್‍ರ ವಸ್ತ್ರಗಳನ್ನು ವಿಶಿಷ್ಟವಾಗಿ ಕರನ್ ಜೋಹರ್ ವಿನ್ಯಾಸಗೊಳಿಸಿದರು. ಮಮ್ದಿರಾ ಶುಕ್ಲಾ ಚಿತ್ರದ ವಸ್ತ್ರ ವಿನ್ಯಾಸಕಿಯಾಗಿದ್ದರು. ಅನಿಲ್ ಮೆಹ್ತಾ ಚಿತ್ರದ ಛಾಯಾಗ್ರಹಣವನ್ನು ಮಾಡಿದರು. ಶರ್ಮಿಷ್ಠ ರಾಯ್‍ರನ್ನು ಚಿತ್ರದ ಕಲಾ ನಿರ್ದೇಶಕಿಯಾಗಿ ಆಯ್ಕೆ ಮಾಡಲಾಯಿತು. ಸರೋಜ್ ಖಾನ್ ಮತ್ತು ವೈಭವಿ ಮರ್ಚೆಂಟ್ ನೃತ್ಯ ನಿರ್ದೇಶಕಿಯರಾಗಿದ್ದರು. ಅಲನ್ ಅಮೀನ್ ಸಾಹಸ ನಿರ್ದೇಶಕರಾಗಿದ್ದರು. === ಪ್ರಧಾನ ಛಾಯಾಗ್ರಹಣ === ಚಿತ್ರದ ಕೆಲವು ಭಾಗಗಳನ್ನು ಮುಂಬಯಿಯಲ್ಲಿನ ವಿವಿಧ ಸ್ಥಳಗಳಲ್ಲಿ ಚಿತ್ರೀಕರಿಸಲಾಗಿತ್ತು. ಖಾನ್ ಜೈಲಿನಲ್ಲಿರುವ ದೃಶ್ಯಗಳನ್ನು ಒಂದೇ ದಿನದಲ್ಲಿ, ಪಾಕಿಸ್ತಾನದ ಒಂದು ಜೈಲಿನಲ್ಲಿ ಚಿತ್ರೀಕರಿಸಲಾಗಿತ್ತು. ನ್ಯಾಯಾಲಯದ ದೃಶ್ಯಗಳನ್ನು ಒಂದು ಪಾಕಿಸ್ತಾನಿ ನ್ಯಾಯಾಲಯದಲ್ಲಿ ಚಿತ್ರೀಕರಿಸಲಾಗಿತ್ತು. ಖಾನ್‍ರೊಂದಿಗೆ ಒಂದು ಸಾಹಸ ದೃಶ್ಯಭಾಗವನ್ನು ಚಿತ್ರೀಕರಿಸುವಾಗ, ಜ಼ಿಂಟಾಗೆ ಒಂದು ಸಾವಿಗೆ ಸಮೀಪದ ಅನುಭವವಾಯಿತು. ಅವರು ಸುಮಾರು ಆರು ಗಂಟೆಗಳ ಕಾಲ ಕಟ್ಟುವ ಸಾಧನದಿಂದ ತೂಗಾಡುತ್ತಿರಬೇಕಾಯಿತು. ವೀರ್-ಜ಼ಾರಾವನ್ನು ಸಂಪೂರ್ಣವಾಗಿ ಏಕಕಾಲಿಕ ಧ್ವನಿ ಮುದ್ರಣ ತಂತ್ರದೊಂದಿಗೆ ಚಿತ್ರೀಕರಿಸಲಾಗಿತ್ತು. ಪಟೌಡಿಯಲ್ಲಿರುವ ಸೈಫ್ ಅಲಿ ಖಾನ್‍ರ ಅರಮನೆಯು ಜ಼ಾರಾರ ಮಹಡಿ ಮನೆಯಾಗಿ ಕಾರ್ಯನಿರ್ವಹಿಸಿತು. ಬಹುತೇಕ ಚಿತ್ರೀಕರಣವನ್ನು ರಹಸ್ಯವಾಗಿ ಮಾಡಲಾಯಿತು ಮತ್ತು ಯಾವುದೇ ಅಧಿಕೃತ ಉದ್ಘೋಷಗಳನ್ನು ಮಾಡಲಾಗಲಿಲ್ಲ. ಚಿತ್ರದ ಚಿತ್ರೀಕರಣವನ್ನು ೭೨ ದಿನಗಳಲ್ಲಿ ಮುಗಿಸಲಾಯಿತು. == ವಿಶ್ಲೇಷಣೆ == ಜ಼ಾರಾ ಪಾಕಿಸ್ತಾನದಲ್ಲಿನ ಜಾತ್ಯತೀತತೆಯನ್ನು ಪ್ರತಿನಿಧಿಸುತ್ತಾಳೆ ಎಂದು ತಮ್ಮ ಒಂದು ಪುಸ್ತಕದಲ್ಲಿ ಇಂಗ್ಲಿಷ್‍ನ ಸಹ ಪ್ರಾಧ್ಯಾಪಕಿ ಕವಿತಾ ದೈಯಾ ಭಾವಿಸುತ್ತಾರೆ. ಚಿತ್ರದಲ್ಲಿ ಯಾವುದೇ ವ್ಯಕ್ತಿಯು ಭಾರತೀಯ ಅಥವಾ ಪಾಕಿಸ್ತಾನಿ ಆಗಿದ್ದಕ್ಕಾಗಿ ದ್ವೇಷವನ್ನು ಎದುರಿಸುವುದಿಲ್ಲ ಎಂದು ದೈಯಾ ಗಮನಿಸುತ್ತಾರೆ. ಎಂದು ಲೇಖಕರಾದ ಮೀನಾಕ್ಷಿ ಮತ್ತು ನಿರ್ಮಲ್ ದೈಯಾರೊಂದಿಗೆ ಸಮ್ಮತಿಸಿ ಮತ್ತು ಇದು ಜಮ್ಮು ಕಾಶ್ಮೀರ ಸಮಸ್ಯೆಯನ್ನು ಕಡೆಗಣಿಸುವ ಚೋಪ್ರಾರ ಕಡೆಯಿಂದ ಪ್ರೌಢತ್ವವನ್ನು ತೋರಿಸುತ್ತದೆ ಮತ್ತು ಚೋಪ್ರಾ ಭಾರತೀಯ ಚಲನಚಿತ್ರಗಳಲ್ಲಿ ಸಾಮಾನ್ಯವಾಗಿ ಇರುವ ಪಾಕಿಸ್ತಾನದ ಭೀತಿಯನ್ನು ಜಯಿಸಲು ಯಶಸ್ವಿಯಾದರು ಎಂದು ಭಾವಿಸುತ್ತಾರೆ. ಫ಼ಿಲಿಪ್ ಲುಟ್ಗನ್‍ಡಾರ್ಫ಼್ ಸಮ್ಮತಿಸಿ ಸೂಫ಼ಿ ಸಂಪ್ರದಾಯದ ಪ್ರಭಾವವನ್ನೂ ಗಮನಿಸುತ್ತಾರೆ ಮತ್ತು ಒಬ್ಬ ಸೂಫ಼ಿ ಪೀರ್‌ನಂತೆ ಅಲ್ಲಾಹನೊಂದಿಗೆ ಸಂಯೋಗವು ವೀರ್‌ನ ಅಂತಿಮ ಪುರಸ್ಕಾರವಾಗಿರುತ್ತದೆ. ಪ್ರೇಮಿಗಳು ಬೇರೆಯಾಗಿಯೇ ಉಳಿಯುವ ಚೋಪ್ರಾರ ಹಿಂದಿನ ಪ್ರಣಯಪ್ರಧಾನ ಚಿತ್ರಗಳಿಗೆ ಹೋಲಿಸಿದರೆ ಇದರಲ್ಲಿ ಪ್ರೇಮಿಗಳು ಮತ್ತೆ ಒಂದಾಗುತ್ತಾರೆ ಎಂದು ಲೇಖಕ ಕುಶ್ ವಾರಿಯಾ ಗಮನಿಸುತ್ತಾರೆ. ವೀರ್‌ನ ಭಾರತೀಯ ಪುರುಷತ್ವವನ್ನು ಜೈಲಿನಲ್ಲಿ ೨೨ ವರ್ಷಗಳನ್ನು ಕಳೆಯುವ ಅವನ ತ್ಯಾಗದ ಮೂಲಕ ತೋರಿಸಲಾಗುತ್ತದೆ ಎಂದು ದೈಯಾ ಪ್ರಮಾಣೀಕರಿಸುತ್ತಾರೆ. ವೀರ್‌ನ ಪಾತ್ರವು ಭಾಗಶಃ ಹೆಣ್ಣಾಗಿಸಲ್ಪಡುತ್ತದೆ ಎಂದು ನಂದಿನಿ ಭಟ್ಟಾಚಾರ್ಯ ಭಾವಿಸುತ್ತಾರೆ. ೨೨ ವರ್ಷಗಳ ನಂತರ ವೀರ್‌ನ ಸ್ವವ್ಯಕ್ತಿತ್ವವು ಸಾಯುತ್ತದೆ ಮತ್ತು ಜ಼ಾರಾನೊಂದಿಗೆ ಮತ್ತೆ ಒಂದಾದ ಮೇಲೂ, ಅವರು ಸಂತಾನೋತ್ಪತ್ತಿ ಮಾಡಲು ಬಹಳ ವೃದ್ಧರಾಗಿರುತ್ತಾರೆ. ವೀರ್-ಜ಼ಾರಾದಲ್ಲಿನ ಪಂಜಾಬಿ ಗ್ರಾಮವು ಭಾರತದ ಒಂದು ಮಾದರಿಯಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಭಾರತವನ್ನು ವರ್ಣಿಸುವ ಒಂದು ಹಾಡಿಗೆ ಪಾಕಿಸ್ತಾನದ ಹೋಲಿಕೆಗಳನ್ನು ಅನುಭವಿಸಿ ಜ಼ಾರಾಳ ಸಕಾರಾತ್ಮಕ ಪ್ರತಿಕ್ರಿಯೆಯು ಇಬ್ಬರು ಪ್ರೇಮಿಗಳ ನಡುವಿನ ಅಪೂರ್ಣವಾದ "ಆದರ್ಶ" ಸಂಬಂಧವನ್ನು ಪ್ರಕಟಪಡಿಸುತ್ತದೆ ಎಂದು ದೈಯಾ ಭಾವಿಸುತ್ತಾರೆ. ವೀರ್‌ನ ಕವನವು ಭಾರತ ಮತ್ತು ಪಾಕಿಸ್ತಾನ ದೇಶಗಳ ನಡುವಿನ ವ್ಯತ್ಯಾಸಗಳಿಗೆ ಸವಾಲೊಡ್ಡುತ್ತದೆ ಮತ್ತು ರಾಷ್ಟ್ರಗಳು ಹಾಗೂ ನಾಗರಿಕರ ನಡುವಿನ ಹೋಲಿಕೆಗಳನ್ನು ಸ್ಥಾಪಿಸುತ್ತದೆ ಎಂದು ದೈಯಾ ಭಾವಿಸುತ್ತಾರೆ. ಪಂಜಾಬಿಗಳ ಹಂಚಿಕೊಂಡ ಪರಂಪರೆಯು ಚಿತ್ರದ ವಿಷಯಗಳಲ್ಲಿ ಒಂದಾಗಿದೆ ಎಂದು ವಾರಿಯಾ ಕೂಡ ಸಮ್ಮತಿಸುತ್ತಾರೆ. ಈ ಚಿತ್ರವು ಪ್ರತ್ಯೇಕ ಘಟಕವಾಗಿ ಪಾಕಿಸ್ತಾನದ ಸ್ಥಾನವನ್ನು ಒಪ್ಪಿಕೊಳ್ಳುತ್ತದೆಂದು ಭರತ್ ಮತ್ತು ಕುಮಾರ್ ಭಾವಿಸುತ್ತಾರೆ. ವೀರ್-ಜ಼ಾರಾ ಗಡಿರೇಖೆಯನ್ನು ದಾಟುವುದರ ಸಂತೋಷಗಳು ಮತ್ತು ಪರೀಕ್ಷೆಗಳನ್ನು ಅನ್ವೇಷಿಸಿದರೆ ಮೇ ಹ್ಞೂ ನಾ ಗಡಿರೇಖೆಯನ್ನು ರಾಜತಾಂತ್ರಿಕತೆ ಮತ್ತು ವೈಯಕ್ತಿಕ ಕ್ರಿಯೆಗಳ ಮೂಲಕ ಜಯಿಸುವ ಅನುಕೂಲಗಳನ್ನು ಮೆಚ್ಚಿ ಕೊಂಡಾಡುತ್ತದೆ ಎಂದು ಹಿರಿಯ ಉಪನ್ಯಾಸಕರಾದ ರಾಜಿಂದರ್ ದುದ್ರಾ ಬರೆಯುತ್ತಾರೆ. ಅವುಗಳು ನಾಯಕರು ಜಯಿಸಬೇಕಾದ ಗಡಿರೇಖೆಗಳ ಭಿನ್ನ ಚಿತ್ರಣಗಳನ್ನು ತೋರಿಸುತ್ತವೆಂದು ಅವರು ಗಮನಿಸುತ್ತಾರೆ. ಸಂಭಾವ್ಯವಾಗಿ ತೀವ್ರವಾದ ಕೃತ್ಯವಾಗಿ ಗಡಿರೇಖೆಯನ್ನು ದಾಟುವುದರ ಮೇಲಿನ ಒತ್ತು ವೀರ್-ಜ಼ಾರಾ ಚಿತ್ರದ ಕೇಂದ್ರ ಸೌಂದರ್ಯಾತ್ಮಕ ಸಂತೋಷವಾಗಿದೆ ಎಂದು ಅವರು ಭಾವಿಸುತ್ತಾರೆ. ಚಿತ್ರದ ಉಭಯ ಕಾಲ ಮತ್ತು ಹಳೆ ಸಂಗೀತದ ಬಳಕೆಯು ಸಾಮಾನ್ಯ ಜನರಿಗೆ ಇಷ್ಟವಾಗುವುದಕ್ಕೆ ಮತ್ತು ವಾಣಿಜ್ಯಿಕ ಯಶಸ್ಸಾಗುವುದಕ್ಕೆ ಕಾರಣವಾಗಿತ್ತು ಎಂದು ಗೋಪಾಲ್ ಭಾವಿಸುತ್ತಾರೆ. ಪಾಕಿಸ್ತಾನಿ ಮತ್ತು ಮುಸ್ಲಿಮ್ ಸಂಪ್ರದಾಯಗಳನ್ನು ಎತ್ತಿ ತೋರಿಸಲಾಗಿತ್ತು ಎಂದು ಗಮನಿಸುತ್ತಾ, ಚಿತ್ರದಲ್ಲಿ ಸಾಂಸ್ಕೃತಿಕ ಮತ್ತು ಧಾರ್ಮಿಕ ಭಿನ್ನತೆಗಳಳನ್ನು ಗುರುತಿಸಲಾಗಲಿಲ್ಲ ಎಂದು ಫ಼ೈಜ಼ಾ ಹಿರ್ಜಿಯವರಿಗೆ ಅನಿಸುತ್ತದೆ. == ಸಂಗೀತ == ವೀರ್-ಜ಼ಾರಾದ ಧ್ವನಿವಾಹಿನಿಯು ದಿವಂಗತ ಮದನ್ ಮೋಹನ್‍ರ ಹಳೆಯ ಮತ್ತು ಸ್ಪರ್ಶಿಸಿರದ ರಚನೆಗಳ ಮೇಲೆ ಆಧಾರಿತವಾದ ಸಂಗೀತವಿರುವ ೧೧ ಹಾಡುಗಳನ್ನು ಹೊಂದಿದೆ. ಇವನ್ನು ಅವರ ಮಗ ಸಂಜೀವ್ ಕೋಹ್ಲಿ ಪರಿಷ್ಕರಿಸಿದ್ದರು. ಹಾಡುಗಳನ್ನು ಲತಾ ಮಂಗೇಶ್ಕರ್, ಜಗ್‍ಜಿತ್ ಸಿಂಗ್‌, ಉದಿತ್ ನಾರಾಯಣ್, ಸೋನು ನಿಗಮ್, ಗುರ್‌ದಾಸ್ ಮಾನ್, ರೂಪ್ ಕುಮಾರ್ ರಾಥೋಡ್, ಅಹಮದ್ ಹುಸೇನ್, ಮೊಹಮ್ಮದ್ ಹುಸೇನ್ ಮತ್ತು ಪ್ರೀತಾ ಮಜ಼ುಮ್‍ದರ್ ಹಾಡಿದ್ದಾರೆ. ಹಾಡುಗಳಿಗೆ ಸಾಹಿತ್ಯವನ್ನು ಜಾವೇದ್ ಅಕ್ತರ್ ಬರೆದಿದ್ದರು. ಚೋಪ್ರಾ ಆಗ್ರಹಿಸಿದ ಮೇಲೆ ಕೋಹ್ಲಿ ಮೋಹನ್‍ರ ಮರಣದ ಸ್ವಲ್ಪ ಸಮಯದ ನಂತರ ಅವರ ಅಲಮಾರುವಿನಲ್ಲಿ ಪತ್ತೆಮಾಡಿದ ಮೋಹನ್‍ರ ಬಳಸದಿರದ ಮುದ್ರಣಗಳನ್ನು ಬಳಸಲಾಯಿತು. ವೀರ್-ಜ಼ಾರಾದ ಧ್ವನಿವಾಹಿನಿಯನ್ನು ಸಿಡಿ, ಎಲ್‍ಪಿ ರೆಕಾರ್ಡ್ ಮತ್ತು ಆಡಿಯೊ ಡಿವಿಡಿಯಲ್ಲಿ ಬಿಡುಗಡೆ ಮಾಡಲಾಯಿತು. ಧ್ವನಿವಾಹಿನಿಯ ಬಿಡುಗಡೆಯ ನಂತರ, ಕುತೂಹಲವನ್ನು ಕೆರಳಿಸಲು ಚೋಪ್ರಾ ಅದರ ಹಾಡುಗಳನ್ನು ಪ್ರಸಾರ ಮಾಡಲು ರೇಡಿಯೊ ಕೇಂದ್ರಗಳಿಗೆ ಅನುಮತಿ ನೀಡಲಿಲ್ಲ. ೫೦ನೇ ಫಿಲ್ಮ್‌ಫೇರ್ ಪ್ರಶಸ್ತಿ ಸಮಾರಂಭದಲ್ಲಿ ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿಗಾಗಿ ಮೋಹನ್ ನಾಮನಿರ್ದೇಶನಗೊಂಡರು. ೬ನೇ ಐಫ಼ಾ ಪ್ರಶಸ್ತಿ ಸಮಾರಂಭದಲ್ಲಿ ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿಯನ್ನು ಗೆದ್ದರು. ಇದು ಆ ವರ್ಷ ಅತಿ ಹೆಚ್ಚು ಮಾರಾಟವಾದ ಸಂಗೀತ ಧ್ವನಿಸುರುಳಿ ಸಂಗ್ರಹವಾಗಿತ್ತು ಮತ್ತು ಸುಮಾರು ೩ ದಶಲಕ್ಷ ಘಟಕಗಳು ಮಾರಾಟವಾದವು. == ಬಿಡುಗಡೆ == ವೀರ್-ಜ಼ಾರಾ ೧೨ ನವೆಂಬರ್ ೨೦೦೪ರಂದು ಬಿಡುಗಡೆಯಾಯಿತು. ಇದನ್ನು "ಅ ಲವ್ ಲೆಜೆಂಡ್" ಎಂಬ ಆಕರ್ಷಕ ಪದಪುಂಜವನ್ನು ಬಳಸಿ ಪ್ರಚಾರಮಾಡಲಾಯಿತು. ಪಾಕಿಸ್ತಾನಿ ಪ್ರೇಕ್ಷಕರಿಗಾಗಿ ಪಾಕಿಸ್ತಾನದ ಪಂಜಾಬ್‍ನಲ್ಲಿ ವಿಶೇಷ ಪ್ರದರ್ಶನವನ್ನು ಏರ್ಪಡಿಸಲಾಯಿತು. ಇದರ ಜೊತೆಗೆ, ಈ ಚಿತ್ರವನ್ನು ಬರ್ಲಿನ್ ಚಲನಚಿತ್ರೋತ್ಸವದಲ್ಲಿ ಪ್ರದರ್ಶಿಸಲಾಯಿತು. ಅಲ್ಲಿ ಇದನ್ನು ಉತ್ತಮವಾಗಿ ಸ್ವೀಕರಿಸಲಾಯಿತು. 6 ಜೂನ್ ೨೦೦೫ರಂದು ಯಶ್ ರಾಜ್ ಫ಼ಿಲ್ಮ್ಸ್ ವೀರ್-ಜ಼ಾರಾದ ಡಿವಿಡಿಯನ್ನು ಬಿಡುಗಡೆ ಮಾಡಿತು. ಚಿತ್ರವನ್ನು ಬ್ಲೂ-ರೇ ರೂಪದಲ್ಲಿ ಡಿಸೆಂಬರ್ ೨೦೦೯ ರಲ್ಲಿ ಬಿಡುಗಡೆ ಮಾಡಲಾಯಿತು. ಜನವರಿ ೨೦೦೬ರಲ್ಲಿ, ಅಮೃತ್‍ಸರ್ ಮತ್ತು ಲಾಹೋರ್ ನಡುವೆ ಬಸ್ ಸೇವೆಯನ್ನು ಸ್ಥಾಪಿಸಲಾಯಿತು. ಈ ಬದಲಾವಣೆಯನ್ನು ತರುವಲ್ಲಿ ಕೆಲವರು ಈ ಚಲನಚಿತ್ರದ ಕೊಡುಗೆಯನ್ನು ಗುರುತಿಸುತ್ತಾರೆ. === ಬಾಕ್ಸ್ ಆಫ಼ಿಸ್ === ವೀರ್-ಜ಼ಾರಾ ಬಾಕ್ಸ್ ಆಫ಼ಿಸ್‍ನಲ್ಲಿ ವಾಣಿಜ್ಯಿಕವಾಗಿ ಯಶಸ್ವಿಯಾಯಿತು. ಚಿತ್ರಮಂದಿರಗಳಲ್ಲಿ ಅದರ ಪ್ರದರ್ಶನ ಅವಧಿಯ ಅಂತ್ಯಕ್ಕೆ, ಈ ಚಿತ್ರವು ಭಾರತದಲ್ಲಿ ₹580 ದಶಲಕ್ಷದಷ್ಟು ಸಂಗ್ರಹಿಸಿ ವರ್ಷದ ಅತಿ ಹೆಚ್ಚು ಹಣ ಗಳಿಸಿದ ಚಲನಚಿತ್ರವೆಂದೆನಿಸಿಕೊಂಡಿತು. ಇದರ ವಿದೇಶದ ಹಣಗಳಿಕೆಯ ಸಂಬಂಧವಾಗಿ ಈ ಚಲನಚಿತ್ರವು ಬ್ಲಾಕ್‍ಬಸ್ಟರ್ ಎಂದು ಪರಿಗಣಿತವಾಯಿತು. ವೀರ್-ಜ಼ಾರಾ ವಿಶ್ವಾದ್ಯಂತ ಒಟ್ಟು ₹976.4 ದಶಲಕ್ಷದಷ್ಟು ಹಣಗಳಿಸಿ ಆ ವರ್ಷದ ಅತಿ ಹೆಚ್ಚು ಹಣಗಳಿಸಿದ ಭಾರತೀಯ ಚಲನಚಿತ್ರವಾಯಿತು. == ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳು == ಫಿಲ್ಮ್‌ಫೇರ್ ಪ್ರಶಸ್ತಿಗಳು ಅತ್ಯುತ್ತಮ ಚಲನಚಿತ್ರ - ಯಶ್ ಚೋಪ್ರಾ, ಆದಿತ್ಯ ಚೋಪ್ರಾ - ಗೆಲುವು ಅತ್ಯುತ್ತಮ ಗೀತಸಾಹಿತಿ - ಜಾವೇದ್ ಅಖ್ತರ್ ("ತೇರೆ ಲಿಯೆ") - ಗೆಲುವು ಅತ್ಯುತ್ತಮ ಕಥೆ - ಆದಿತ್ಯ ಚೋಪ್ರಾ - ಗೆಲುವು ಅತ್ಯುತ್ತಮ ಸಂಭಾಷಣೆ - ಆದಿತ್ಯ ಚೋಪ್ರಾ - ಗೆಲುವು ಅತ್ಯುತ್ತಮ ನಿರ್ದೇಶಕ - ಯಶ್ ಚೋಪ್ರಾ - ನಾಮನಿರ್ದೇಶಿತ ಅತ್ಯುತ್ತಮ ನಟ - ಶಾರುಖ್ ಖಾನ್ - ನಾಮನಿರ್ದೇಶಿತ ಅತ್ಯುತ್ತಮ ನಟಿ - ಪ್ರೀತಿ ಜ಼ಿಂಟಾ - ನಾಮನಿರ್ದೇಶಿತ ಅತ್ಯುತ್ತಮ ಪೋಷಕ ನಟ - ಅಮಿತಾಭ್ ಬಚ್ಚನ್ - ನಾಮನಿರ್ದೇಶಿತ ಅತ್ಯುತ್ತಮ ಪೋಷಕ ನಟಿ - ದಿವ್ಯಾ ದತ್ತಾ - ನಾಮನಿರ್ದೇಶಿತ ಅತ್ಯುತ್ತಮ ಪೋಷಕ ನಟಿ - ರಾನಿ ಮುಖರ್ಜಿ - ನಾಮನಿರ್ದೇಶಿತ ಅತ್ಯುತ್ತಮ ಗೀತಸಾಹಿತಿ - ಜಾವೇದ್ ಅಖ್ತರ್ ("ಮೇ ಯಹ್ಞಾ") - ನಾಮನಿರ್ದೇಶಿತ ಅತ್ಯುತ್ತಮ ಗೀತಸಾಹಿತಿ - ಜಾವೇದ್ ಅಖ್ತರ್ ("ಎಯ್ಸಾ ದೇಸ್ ಹೇ ಮೇರಾ") - ನಾಮನಿರ್ದೇಶಿತ ಅತ್ಯುತ್ತಮ ಹಿನ್ನೆಲೆ ಗಾಯಕ - ಸೋನು ನಿಗಮ್ ("ದೋ ಪಲ್") - ನಾಮನಿರ್ದೇಶಿತ ಅತ್ಯುತ್ತಮ ಹಿನ್ನೆಲೆ ಗಾಯಕ - ಉದಿತ್ ನಾರಾಯಣ್ ("ಮೇ ಯಹ್ಞಾ") - ನಾಮನಿರ್ದೇಶಿತ == ಉಲ್ಲೇಖಗಳು == == ಹೊರಗಿನ ಕೊಂಡಿಗಳು == - @ ಐ ಎಮ್ ಡಿ ಬಿ ಬಾಕ್ಸ್ ಆಫ಼ೀಸ್ ಮೋಜೊದಲ್ಲಿ ವೀರ್-ಜ಼ಾರಾ (ಚಲನಚಿತ್ರ) -'